ದರೆಗುಡ್ಡೆಯ ನಾಗಪ್ಪ ಪೂಜಾರಿಯವರಿಗೆ ಮೈಸೂರು ವಿಭಾಗ ಮಟ್ಟದ 'ಅತ್ಯುತ್ತಮ ಕೃಷಿ ಸಾಧಕ ಪುರಸ್ಕಾರ'

BIDIRE NEWS

ಮೂಡುಬಿದಿರೆ: ತಾಲೂಕಿನ ದರೆಗುಡ್ಡೆ ಗ್ರಾಮದ ಕೊಟ್ರೊಟ್ಟು ನಿವಾಸಿ, ಹಿರಿಯ ಕೃಷಿಕ ನಾಗಪ್ಪ ಪೂಜಾರಿ ಅವರು ಮೈಸೂರು ವಿಭಾಗ ಮಟ್ಟದ ಕೃಷಿ ಮೇಳದಲ್ಲಿ ನೀಡಲಾಗುವ 'ಅತ್ಯುತ್ತಮ ಕೃಷಿ ಪುರಸ್ಕಾರ'ಕ್ಕೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.

ದರೆಗುಡ್ಡೆಯ ತುಂಗಪ್ಪ ಪೂಜಾರಿ ಮತ್ತು ನೀಲಮ್ಮ ಪೂಜಾರ್ತಿ ದಂಪತಿಯ ಪುತ್ರರಾದ ನಾಗಪ್ಪ ಪೂಜಾರಿ ಅವರು 1940ರಲ್ಲಿ ಜನಿಸಿದವರು. 5ನೇ ತರಗತಿಯವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದಿದ್ದರೂ, ಕಳೆದ 5 ದಶಕಗಳಿಂದ ಕೃಷಿ ಕ್ಷೇತ್ರದಲ್ಲಿ ನಿರಂತರ ಪ್ರಯೋಗಗಳನ್ನು ಮಾಡುತ್ತಾ ಅಪಾರ ಸಾಧನೆ ಮಾಡಿದ್ದಾರೆ.

​ವೈವಿಧ್ಯಮಯ ಕೃಷಿ ಬದುಕು:

ಸುಮಾರು 45-50 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು, ತಮ್ಮ ಜಮೀನಿನಲ್ಲಿ ಈ ಕೆಳಗಿನ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಭತ್ತ, ಅಡಿಕೆ, ತೆಂಗು ಮತ್ತು ಸುಮಾರು ಐದು ತಳಿಯ ಬಾಳೆಗಳು, ನಾಟಿ ಕೋಳಿ ಸಾಕಾಣಿಕೆ, ಜೋಳ ಮತ್ತು ಹೆಸರು ಕಾಳುಗಳ ಬೆಳೆ ಹೀಗೆ ಮೂರು ಎಕರೆ ಜಾಗದಲ್ಲಿ ವಿವಿಧಹಣ್ಣು-ಹಂಪಲುಗಳು ಹಾಗೂ ಅರಣ್ಯ ಸಸ್ಯಗಳನ್ನು ಬೆಳೆಸಿದ್ದಾರೆ.


ಕೃಷಿಯಷ್ಟೇ ಅಲ್ಲದೆ, ನಾಗಪ್ಪ ಪೂಜಾರಿಯವರು ಸಮಾಜದೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ. ಸಭೆ-ಸಮಾರಂಭಗಳಲ್ಲಿ ಅಡುಗೆ ಮಾಡುವ ಹವ್ಯಾಸ ಹೊಂದಿರುವ ಅವರು, ಕೆಲಸದ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದವರಿಗೆ 'ನಾಟಿ ಔಷಧಿ' ನೀಡುವ ಮೂಲಕ ಜನೋಪಕಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.


​ಪ್ರಶಸ್ತಿ ಪ್ರದಾನದ ವಿವರ:

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ಜನವರಿ 10, 11 ಮತ್ತು 12 ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

slider