ಯಕ್ಷಲೋಕದ ಸವ್ಯಸಾಚಿ, ಅಪ್ರತಿಮ ಛಾಂದಸ ವಿದ್ವಾಂಸ ಗಣೇಶ್ ಕೊಲೆಕಾಡಿ

BIDIRE NEWS

ಬರಹ: ಎಂ.ಶಾಂತರಾಮ ಕುಡ್ವ ಮೂಡುಬಿದಿರೆ

ಅಭಿನವ ನಾಗವರ್ಮ  ಬಿರುದಾಂಕಿತರಾದ ಡಾ.ಶಿಮಂತೂರು ನಾರಾಯಣ ಶೆಟ್ಟರ  ಪಟ್ಟಶಿಷ್ಯ ಎಂಬ ನೆಗಳ್ತೆಗೆ ಪಾತ್ರರಾದ  ಬಹುಮುಖ ಪ್ರತಿಭೆ ಹೊಂದಿರುವ ವ್ಯಕ್ತಿತ್ವದ ಗಣೇಶ್ ಕೊಲೆಕಾಡಿ ಯವರು ನಿಧನರಾದ ಹೃದಯ ವಿದ್ರಾವಕ ಸುದ್ದಿಯೊಂದು ಯಕ್ಷಲೋಕಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ . ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದು , ಇತ್ತೀಚೆಗೆ ಗಂಭೀರ ಸ್ಥಿತಿಯಲ್ಲಿದ್ದ ಗಣೇಶ್ ಕೊಲೆಕಾಡಿಯವರನ್ನು ಉಳಿಸಲು ಅವರ ಶಿಷ್ಯವೃಂದವು ಮಾಡಿದ  ಪ್ರಯತ್ನ ಸಫಲವಾಗಲಿಲ್ಲ ಎಂಬುದೊಂದು ದೊಡ್ಡ ದುರಂತ .


ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಕಲಾವಿದರೋರ್ವರ ಬದುಕು ದುರಂತದಲ್ಲಿ ಕೊನೆಗೊಂಡದ್ದು ದೀರ್ಘಕಾಲ ಮನಸ್ಸಿನಲ್ಲಿ ಉಳಿದು ಮರೆಯಲಾಗದಂತಹುದು . ಇತ್ತೀಚಿನ ದಿನಗಳಲ್ಲಿ ಸಾಲುಸಾಲಾಗಿ ಯಕ್ಷಗಾನ ಕಲಾವಿದರ ನಿಧನರಾಗಿರುವುದಲ್ಲದೇ , ಆ ಸಾಲಿನಲ್ಲಿ ಕೊಲೆಕಾಡಿಯವರ ಹೆಸರೂ ಸೇರ್ಪಡೆಯಾಗಿರುವುದು ವಿಷಾದನೀಯ . ಕೊಲೆಕಾಡಿಯವರ ನಿಧನದ ವಾರ್ತೆಯು  ಯಕ್ಷಗಾನ ಪ್ರೇಮಿಗಳಿಗೆ ತೀವ್ರ  ಆಘಾತವನ್ನು ಉಂಟುಮಾಡಿದೆ . 

ಮೂಲ್ಕಿ ಸಮೀಪದ  ಅತಿಕಾರಿಬೆಟ್ಟು ಗ್ರಾಮದ ಕೊಲೆಕಾಡಿಯ ದಿ.ಕೃಷ್ಣಪ್ಪ ಸಾಲಿಯಾನ್ - ಪದ್ಮಪೂಜಾರ್ತಿ ದಂಪತಿಗಳ ಸುಪುತ್ರರಾಗಿ 12.04.1971ರಲ್ಲಿ ಜನಿಸಿದ ಕೊಲೆಕಾಡಿಯವರು ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಅಪ್ರತಿಮ ಸಾಧಕರ ಸಾಲಿನಲ್ಲಿ ಸೇರಿದವರು  .ಲಯಬೃಹ್ಮ  ದಿವಾಣ ಭೀಮಭಟ್ ರಲ್ಲಿ ಯಕ್ಷಗಾನದ ಹಿಮ್ಮೇಳದ ಪರಿಪೂರ್ಣತೆಯನ್ನು ಪಡೆದು ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿದವರು  .

 ಗಣೇಶ ಕೊಲೆಕಾಡಿಯವರ ಪರಿಚಯ ನನಗಾದದ್ದು ಅನಿರೀಕ್ಷಿತವಾಗಿ . 2012 ರಲ್ಲಿ ನನ್ನ ಸಂಬಂಧಿಕಳೋರ್ವಳಿಗೆ  ಭಾಗವತಿಕೆ ಕಲಿಸಲು  ಗುರುಗಳು ಯಾರಾದೀತು ಎಂದು ಹುಡುಕಾಟದಲ್ಲಿದ್ದಾಗ  ನನ್ನ ಮಿತ್ರರಾದ , ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ಕೊಲೆಕಾಡಿಯವರ ಹೆಸರು ಸೂಚಿಸಿ , ಅವರ ಮೊಬೈಲ್ ನಂಬ್ರವನ್ನೂ ಕೊಟ್ಟರು . ನನಗೆ ಅವರಲ್ಲಿ ಮಾತನಾಡಿ  ಪರಿಚಯವಿಲ್ಲದಿದ್ದರೂ ( ಕೇವಲ ಅವರ ಹೆಸರನ್ನು ಪತ್ರಿಕೆಗಳ ಬರಹಗಳಲ್ಲಿ ಓದಿದ್ದೆ ) ಕೊಲೆಕಾಡಿಯವರಿಗೆ ನನ್ನ ಪರಿಚಯವಿತ್ತು . ಸಂತೋಷದಿಂದಲೇ  ಭಾಗವತಿಕೆ ಕಲಿಸಲು ಒಪ್ಪಿದರು . ನಾನು ಕೊಲೆಕಾಡಿಯವರ ಮನೆಗೆ ಹೋದಾಗಲೇ , ನನಗೆ ಅವರ ಪರಿಸ್ಥಿತಿ ಅರಿವಾದದ್ದು . 16  ವರ್ಷಗಳ ಹಿಂದೆ ಮುಂಬೈನಲ್ಲಿ ಜರಗಿದ ಭೀಕರ ಅಪಘಾತದಿಂದಾಗಿ  ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಯಿತು . ಮನೆಯಲ್ಲಿ ಮಂಚದಲ್ಲೇ ಮಲಗಿ ಶಿಷ್ಯರಿಗೆ ಪಾಠ ಹೇಳಿ ಕೊಡುತ್ತಿದ್ದರು , ಮಾತ್ರವಲ್ಲ ಪ್ರತಿಫಲ ಅಪೇಕ್ಷೆ  ಇಲ್ಲದೇ ಉಚಿತವಾಗಿ 

ಶಿಕ್ಷಣ ನೀಡುತ್ತಿದ್ದರು .ನನಗೆ ಮೊದಲ ನೋಟದಲ್ಲೇ ಕೊಲೆಕಾಡಿಯವರಲ್ಲಿ ಅದೇನೋ ಗೌರವ ಮೂಡಿತು . ದೈಹಿಕ ಸಾಮರ್ಥ್ಯ ಕುಂದಿದರೂ, ಮಾನಸಿಕ ದೃಢತೆ ಹೊಂದಿದ್ದ ಕೊಲೆಕಾಡಿಯವರ ಬಗ್ಗೆ ನನಗೆ ಅಪಾರ ಅಭಿಮಾನ ಪ್ರಥಮ ಭೇಟಿಯಲ್ಲೇ ಮೂಡಿತು .‌ ಅಂದಿನಿಂದ ನನಗೂ ಕೊಲೆಕಾಡಿಯವರಿಗೂ ಮಿತ್ರತ್ವ ಗಾಢವಾಯಿತು .ಅಂದು ನಾನು ಕೊಲೆಕಾಡಿಯವರನ್ನು ಭೇಟಿಯಾಗಿ ಮಾತಾಡಿಸಿದುದು  ಪ್ರಥಮವಾದರೂ , ಕೊಲೆಕಾಡಿಯವರು , ಈ ಮೊದಲೊಮ್ಮೆ ನನ್ನನ್ನು ಭೇಟಿಯಾಗಿದ್ದುದನ್ನು  ನನ್ನಲ್ಲಿ ತಿಳಿಸಿದರು .ಈ ಘಟನೆಯ ಮೂರು ವರ್ಷಗಳ ಹಿಂದೆ ನಮ್ಮ ಮೂಡಬಿದಿರೆಯ ಯಕ್ಷಸಂಗಮ*ದ ವಾರ್ಷಿಕೋತ್ಸವದಂದು ನಾವು ಡಾ. ಶಿಮಂತೂರು ನಾರಾಯಣ ಶೆಟ್ಟರನ್ನು ಸಂಮಾನಿಸಿದ್ದೆವು . ಅಂದು ತಮ್ಮ ಗುರುಗಳ ಸಂಮಾನದಲ್ಲಿ ಭಾಗಿಯಾಗಲು ಕೊಲೆಕಾಡಿಯವರು ತೀವ್ರ ಅನಾರೋಗ್ಯದಲ್ಲಿದ್ದರೂ ,  ಬಂದಿದ್ದರು .ಆ ಸಂದರ್ಭದಲ್ಲಿ ನನ್ನೊಂದಿಗೆ ಮಾತಾಡಿದ್ದರೆಂದು ಅವರು ತಿಳಿಸಿದ ಮೇಲೆಯೇ ನನಗೆ ಗೊತ್ತಾದದ್ದು .

ಅಂತೂ ಸಜ್ಜನ ಹಾಗೂ ವಿದ್ವಾಂಸರೊಬ್ಬರ ಪರಿಚಯ ನನಗಾದುದು ಸಂತಸದ ಕ್ಷಣವೆಂದು ಭಾವಿಸಿದ್ದೆ .

ಯಕ್ಷಗಾನದ ಹಿಮ್ಮೇಳದಲ್ಲಿ ಪಾರಂಗತರಾದ ನಂತರ ಕೊಲೆಕಾಡಿಯವರನ್ನು ಆಕರ್ಷಿಸಿದ್ದು 'ಛಂದೋಕ್ಷೇತ್ರ' .  ಕಬ್ಬಿಣದ ಕಡಲೆಕಾಯಿ ಎಂದೆನಿಸಿದ  ಛಂದಸ್ಸಿನ‌ ಕುರಿತು ಆಸಕ್ತಿ‌‌ ಬೆಳೆಸಿ , ಸುಪ್ರಸಿದ್ಧ ಛಾಂದಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟರಲ್ಲಿ ಶಿಷ್ಯತ್ವ ಸ್ವೀಕರಿಸಿದರು . ಡಾ.ಶೆಟ್ಟರು  ಛಂದಸ್ಸನ್ನೇ ಉಸಿರಾಗಿಸಿಕೊಂಡ ಅತ್ಯಪೂರ್ವ ಛಾಂದಸ ವಿದ್ವಾಂಸರು , ನೇರ ಮಾತಿನ ಸತ್ಯನಿಷ್ಠರು‌.  ಆ ಕಾಲದಲ್ಲಿ ಛಂದಸ್ಸು ಅಂದರೆ ಮೂಗು ಮುರಿಯುವವರೇ ಜಾಸ್ತಿ‌. ಆದರೆ , ಛಂದಸ್ಸಿನ ಬಗ್ಗೆ ವಿದ್ವಾಂಸರ ಅಭಿಪ್ರಾಯ ,

ಮಾನವನಿಗೆ ವಸ್ತ್ರ ಹೇಗೆ ಅವಶ್ಯಕತೆಯೋ , ಪದ್ಯ ಸಾಹಿತ್ಯಕ್ಕೆ ಛಂದಸ್ಸು ಅನಿವಾರ್ಯ‌‌ . ಅಂದರೆ " ಛಂದೋಬದ್ಧವಾದ ಸಾಹಿತ್ಯವಿಲ್ಲದಿದ್ದಲ್ಲಿ ಯಾವುದೇ ಪದ್ಯಸಾಹಿತ್ಯವೂ ಬೆತ್ತಲೆಯೇ " . ಇದನ್ನೇ ಮೂಲಪಾಟವನ್ನಾಗಿ ಸ್ವೀಕರಿಸಿದ ಕೊಲೆಕಾಡಿಯವರು ಶೃದ್ಧೆಯಿಂದ 

ಡಾ.ನಾರಾಯಣ ಶೆಟ್ಟರಲ್ಲಿ ಛಂದಸ್ಸು , ಮಾತ್ರಾಗಣ , ವ್ಯಾಕರಣ , ತಾಲ ಕಲಿತು ಪಾರಂಗತರಾಗಿ ಡಾ.ಶೆಟ್ಟರ ಮೆಚ್ಚಿನ ಹಾಗೂ ಪಟ್ಟಶಿಷ್ಯ ಎನಿಸಿಕೊಂಡರು .ಸುಪ್ರಸಿದ್ಧ ಛಾಂದಸರ ಸಾಲಿನಲ್ಲಿ ಗಣೇಶ ಕೊಲೆಕಾಡಿಯವರ ಹೆಸರು ಸೇರ್ಪಡೆಗೊಂಡಿತು.


ಕೊಲೆಕಾಡಿಯವರು  ಬಹುಮುಖ ಪ್ರತಿಭೆ  ಉಳ್ಳ ಅಪ್ರತಿಮ ಸಾಧಕರು . ಛಂದೋಶಾಸ್ತ್ರದ ಮೇಲೆ ಹಿಡಿತ ಹೊಂದಿರುವ ಕಾರಣ ,ಯಕ್ಷಗಾನ ಪ್ರಸಂಗಳ ರಚನೆಯಲ್ಲೂ ಕೈಯಾಡಿಸಿದರು . ಸುಮಾರು ಐವತ್ತಕ್ಕೂ ಮಿಕ್ಕಿ ಯಕ್ಷಗಾನ ಪ್ರಸಂಗಗಳನ್ನು ಸಾರಸ್ವತಲೋಕಕ್ಕೆ ನೀಡಿದ್ದಲ್ಲದೇ , ಇವೆಲ್ಲವೂ ಮೌಲಿಕ ಕೃತಿಗಳು ಎಂಬುದು ಗಮನಾರ್ಹ . ಮಾತ್ರಾಬಂಧ , ಛಂದೋಬದ್ದ , ತಾಲಬದ್ಧಗಳೊಂದಿಗೆ , ಹಲವಾರು ಅಪೂರ್ವವಾದ ತಾಲಗಳ , ಛಂದೋರಚನೆಗಳ ಆನ್ವೇಷಣೆಯೊಂದಿಗೆ  ಯುವ ಛಾಂದಸರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

ಕೊಲೆಕಾಡಿಯವರ ಪ್ರಸಂಗಗಳಲ್ಲಿ ಗಮನಿಸಬಹುದಾದುದು ಸಾಹಿತ್ಯಾತ್ಮಕ ಸೊಗಸು , ವ್ಯಾಕರಣಬದ್ಧತೆ ಹಾಗೂ ಛಂದೋಗುಣಗಳು, ಅಕ್ಷರಕ್ಷರಗಳನ್ನು ಸಾಹಿತ್ಯಮಾಲೆಯಲ್ಲಿ ಪೋಣಿಸಿರುವ ಶೈಲಿ ಅನನ್ಯ ಹಾಗೂ ಅಸದೃಶ .ಆ ಕಾರಣದಿಂದಲೇ ಇವರ ಪ್ರಸಂಗಗಳೆಲ್ಲವೂ ನೂರಾರು ಭಾರಿ ಪ್ರದರ್ಶನಗೊಂಡಿವೆ ಮಾತ್ರವಲ್ಲ , ಇಂದೂ ಜನಪ್ರಿಯತೆ ಉಳಿಸಿಕೊಂಡಿವೆ .ತಾಳಮದ್ದಳೆ ಕೂಟಗಳಲ್ಲೂ ಇವರು ರಚಿಸಿದ ಪ್ರಸಂಗಗಳು ಇಂದೂ ಚಾಲ್ತಿಯಲ್ಲಿವೆ .ಎಂಟು ನಾಟಕಗಳನ್ನೂ , ಹತ್ತಕ್ಕಿಂತಲೂ ಹೆಚ್ಚು ಗ್ರಂಥಗಳಲ್ಲಿ ಮೌಲಿಕ ಬರಹಗಳನ್ನೂ ಬರೆದಿದ್ದಾರೆ. ಪತ್ರಿಕೆಗಳಲ್ಲಿ ಸಾವಿರಾರು ಸಂಶೋಧನಾತ್ಮಕ ಲೇಖನಗಳನ್ನೂ ಬರೆದು ಸಾರಸ್ವತ ಲೋಕದಲ್ಲಿ ವಿದ್ವಾಂಸರೆಂದು  ಗುರುತಿಸಿಕೊಂಡಿದ್ದಾರೆ. ಸಾವಿರಕ್ಕೂ ಮಿಕ್ಕಿ  ಸಂಮಾನ ಪತ್ರಗಳನ್ನು ರಚಿಸಿದ್ದಾರೆ . ಇದರಲ್ಲಿ ನೂರಕ್ಕೂ ಮಿಕ್ಕಿ ಛಂದೋಬದ್ಧ ಪದ್ಯಸಾಹಿತ್ಯದಲ್ಲೇ ರಚಿಸಿರುವುದು ಉಲ್ಲೇಖನೀಯ . ಖಂಡಝಂಪೆ , ತಿಶ್ರಮಠ್ಯ , ಸಂಕೀರ್ಣರೂಪಕ ತಾಲ , ಖಂಡತ್ರಿಪುಟ ಮುಂತಾದ ಅನೇಕ ತಾಲಗಳ ಬಗ್ಗೆ ಸಂಶೋಧಿಸಿ ಉಭಯತಿಟ್ಟುಗಳಿಗೂ ಅನ್ವಯವಾಗುವಂತೆ ಮದ್ದಳೆಯ ತತ್ಕಾರಗಳನ್ನೂ ರಚಿಸಿ  ಕವಿ ಎನಿಸಿಕೊಂಡಿದ್ದಾರೆ .ಹಿಮ್ಮೇಳದಲ್ಲಿ ಪಾರಮ್ಯ ಮೆರೆದಂತೆ , ಮುಮ್ಮೇಳದಲ್ಲೂ ತಾಳಮದ್ದಳೆ ಅರ್ಥಧಾರಿಗಳಾಗಿ ಮೆರೆದ  ಸವ್ಯಸಾಚಿ ಗಣೇಶ ಕೊಲೆಕಾಡಿಯವರು .

 ಯಕ್ಷಗಾನ ಛಂದಃ ಪ್ರಪಂಚ - ಒಂದು ಅನ್ವಯಿಕ  ಅಧ್ಯಯನ ಹಾಗೂ ಛಂದೋವೇದ ಎಂಬ ಎರಡು ಸಂಶೋಧನಾತ್ಮಕ ಗ್ರಂಥ ರಚಿಸಿದ್ದು  ಅಪ್ರಕಟಿತವಾಗಿದೆ . ಪಾರ್ತಿಸುಬ್ಬನ ಬತ್ತೀಸ ತಾಲಗಳ ಬಗ್ಗೆ ವಿಶ್ಲೇಷಣೆ ನಡೆಸಿ ಅವುಗಳಿಗೆ ತೆಂಕುತಿಟ್ಟಿನ ಮದ್ದಲೆಯ ತತ್ಕಾರಗಳನ್ನು ಕೊಲೆಕಾಡಿಯವರು ರೂಪಿಸಿದ್ದು , ಇದು ಈಗಿನ ಮದ್ದಲೆ ವಾದಕರಿಗೆ ತಾಲಸ್ವರೂಪಗಳನ್ನು ರೂಪಿಸುವಲ್ಲಿ ಸಹಾಯವಾಗಿದೆ.

ಗಣೇಶ್ ಕೊಲೆಕಾಡಿಯವರು   ಅನಾರೋಗ್ಯದಿಂದ ಇದ್ದಾಗಲೂ  , ಇತ್ತೀಚಿನ ವರೆಗೂ  ಯಕ್ಷಗಾನೀಯ ಚಟುವಟಿಕೆಗಳಲ್ಲಿ  ಸಕ್ರಿಯರಾಗಿದ್ದರು .ಹಾಸಿಗೆಯಲ್ಲಿ ಮಲಗಿದ್ದಲ್ಲಿಂದಲೇ  ಶಿಷ್ಯಂದಿರಿಗೆ ಉಚಿತವಾಗಿ  ಯಕ್ಷಗಾನ ಹಿಮ್ಮೇಳ , ಮುಮ್ಮೇಳ , ಛಂದಸ್ಸಿನ ಕುರಿತು ಪಾಠ ಹೇಳಿ ಕೊಡುತ್ತಿದ್ದರು . ಸುಮಾರು 500 ಕ್ಕೂ ಮಿಕ್ಕಿ ಶಿಷ್ಯಂದಿರನ್ನು ಹೊಂದಿದ್ದರಲ್ಲದೇ , ಇವರಲ್ಲಿ ಇಂದು ಸುಪ್ರಸಿದ್ಧ ಎನಿಸಿರುವ ಅರ್ಥಧಾರಿಗಳು , ವೇಷಧಾರಿಗಳು , ಭಾಗವತರು ,ಪ್ರಸಂಗಕರ್ತರೂ ಇರುವುದು ಉಲ್ಲೇಖನೀಯ . ರಾಜ್ಯದ ಎಲ್ಲೆಡೆಗಳಲ್ಲೂ ಕೊಲೆಕಾಡಿಯವರ ಶಿಷ್ಯರು ಇದ್ದಾರೆ . ನಾನು ಪ್ರತೀಸಲ ಕೊಲೆಕಾಡಿಯವರ  ಮನೆಗೆ ಹೋದಾಗಲೂ , ಯಾರಾದರೊಬ್ಬ ಸುಪ್ರಸಿದ್ಧ ಕಲಾವಿದರು ಕೊಲೆಕಾಡಿಯವರಲ್ಲಿ ಸಮಾಲೊಚಿಸಲು ಬರುತ್ತಿದ್ದುದನ್ನು ಗಮನಿಸಿದ್ದೇನೆ .ಸುಪ್ರಸಿದ್ಧ ಭಾಗವತರಾದ ಹೊಸ್ತೋಟು , ಕುರಿಯ ಗಣಪತಿ ಶಾಸ್ತ್ರಿ , ಬೊಟ್ಟಿಕೆರೆ , ಪಟ್ಲ , ಅಂಡಾಲ ರಂಥಹವರು ಕೊಲೆಕಾಡಿಯವರನ್ನು ಭೇಟಿಯಾಗಲೆಂದೇ ಅದೆಷ್ಟೋ ಭಾರಿ ಬಂದವರು . ಸುಪ್ರಸಿದ್ಧ ಭಾಗವತರಾದ  ಕುರಿಯ ಗಣಪತಿ ಶಾಸ್ತ್ರಿಗಳಂತೂ ಬಾಡಿಗೆ ಜೀಪ್ ಮಾಡಿ ಕೊಲೆಕಾಡಿಯವರ ಯೋಗಕ್ಷೇಮ ವಿಚಾರಿಸಲೆಂದೇ ಬರುವ ಪರಿಪಾಟ ಹೊಂದಿದವರು . ಯಾವುದಾದರೂ ಸಮಸ್ಯೆಯೋ , ಮಾಹಿತಿಗಾಗಿಯೋ ಬರುವ ಹಿರಿಯ ಕಲಾವಿದರು ,ವಿದ್ವಾಂಸರು  ಅದೆಷ್ಟೋ ?  

ಯಕ್ಷರಂಗದ ಹಾಗೂ ಛಂದಸ್ಸಿನ ಕುರಿತು ಮಾಹಿತಿಗಳ ಕಣಜ  ಎನಿಸಿರುವ ಕೊಲೆಕಾಡಿಯವರು ನೂರಾರು ವಿಚಾರ ಸಂಕಿರಣ , ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ , ಆ ಮೂಲಕ ತಮ್ಮ ಜ್ಞಾನವನ್ನು ಮುಂದಿನ  ಪೀಳಿಗೆಗೆ ದೊರಕುವಂತೆ ಮಾಡಿದ್ದಾರೆ .

 ಕೊಲೆಕಾಡಿಯವರ ಗುರುಗಳಾದ ಡಾ.ಶಿಮಂತೂರು ನಾರಾಯಣ ಶೆಟ್ಟರಿಗೆ ಸುಮಾರು ಐದು ವರ್ಷಗಳ ಹಿಂದೆ ಕಟೀಲಿನಲ್ಲಿ   ಅನಂತಪದ್ಮನಾಭ  ಅಸ್ರಣ್ಣ ಸಹೋದರರಿಂದ  ಸಂಮಾನ ಕಾರ್ಯಕ್ರಮವಿತ್ತು .ನನಗೂ  ಆಹ್ವಾನವಿತ್ತು .

ನಾನು ಕೊಲೆಕಾಡಿಯವರಿಗೆ ಕರೆ ಮಾಡಿದಾಗ ತಾವೂ ಆ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದರು . ‌ಆದರೂ ಅಂದು  ಕೊಲೆಕಾಡಿಯವರ ಅನುಪಸ್ಥಿತಿ ಕಂಡು ಅವರ ಶಿಷ್ಯೆಯಾದ ಭವ್ಯಶ್ರೀ ಕುಲ್ಕುಂದರ   ಬಳಿ ವಿಚಾರಿಸಿದಾಗ , ಕೊಲೆಕಾಡಿಯವರು ಅಸ್ವಸ್ಥರಾದ ಕಾರಣ ಸುರತ್ಕಲ್ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿಯಿತು ‌.ವಿಷಯ ತಿಳಿದು ನನಗೂ ಬೇಸರವಾಯಿತು .( ಕೊಲೆಕಾಡಿಯವರು ಅನಾರೋಗ್ಯದಿಂದಾಗಿ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರು ) . ಅಂದು  ಸಂಮಾನಕ್ಕೆ ಉತ್ತರವಾಗಿ ಮಾತಾಡುವಾಗ ಡಾ.ಶೆಟ್ಟರು ಛಂದಸ್ಸಿನ ಬಗ್ಗೆ ಹೇಳುತ್ತಾ  ಛಂದಸ್ಸಿನ ಅಪರೂಪವಾದ *ಉದ್ದಂಡಷಟ್ಪದಿ* ಯ ಲಯಮರ್ಮ ,

ಮಾತ್ರಾಗಣ ವಿಸ್ತಾರ , ಬಳಕೆ  , ಗುಣಗಳನ್ನು ಪ್ರಸ್ತಾಪಿಸಿ ,  ಇಂದು ಉದ್ದಂಡ ಷಟ್ಪದಿಯ ಕುರಿತು ಯಾರಿಗೂ ಸರಿಯಾಗಿ  ತಿಳಿದಿಲ್ಲ .ಅದು ತಿಳಿದಿದೆ ಎಂದಾದರೆ ನನ್ನ ಪಟ್ಟಶಿಷ್ಯನಾದ ಗಣೇಶ ಕೊಲೆಕಾಡಿಗೆ ಮಾತ್ರ . ಅವನು ಇಂದು ಬಂದಿಲ್ಲವಾದ ಕಾರಣ , ನಾನೀಗ ಹೇಳಿದರೂ ಇಲ್ಲಿ ಯಾರಿಗೂ ಅರ್ಥವಾಗಲಿಕ್ಕಿಲ್ಲ ಎಂದಾಗ ಸಭೆಯಲ್ಲಿದ್ದ ನಾನು ಭಾವಪರವಶನಾಗಿದ್ದೆ .

ಶ್ರೇಷ್ಠ ಛಾಂದಸ ಗುರುಗಳೇ ತಮ್ಮ ಶಿಷ್ಯನೊಬ್ಬನ ಬಗ್ಗೆ ಹೊಗಳಬೇಕಾದರೆ , ಕೊಲೆಕಾಡಿಯವರ ಪ್ರತಿಭಾ ಸಾಮರ್ಥ್ಯ ಯಾವ ಮಟ್ಟದಲ್ಲಿತ್ತು  ಎಂದು ಊಹಿಸಬಹುದು . 8  ವರ್ಷಗಳ ಹಿಂದೆ ,ಅಂದಿನ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ, ಮಾಜಿ ಸಚಿವರಾ ಅಭಯಚಂದ್ರರ ನೇತೃತ್ವದಲ್ಲಿ ,  ಮೂಡಬಿದಿರೆಯ " ಕೋಟಿಚೆನ್ನಯ ಕಂಬಳ ಸಮಿತಿ " ವತಿಯಿಂದ ಗುರುಗಳಾದ ಡಾ.ಶೆಟ್ಟರೊಂದಿಗೆ , ಅವರ ಪಟ್ಟಶಿಷ್ಯ ಕೊಲೆಕಾಡಿಯವರನ್ನೂ ಸಂಮಾನಿಸಿ ಗೌರವಿಸಿದ್ದುದು ಅವಿಸ್ಮರಣೀಯ ಕ್ಷಣ . ಗುರುವಿನೊಂದಿಗೇ ಸಂಮಾನಗೊಳ್ಳುವ ಯೋಗ- ಭಾಗ್ಯ ಸಿಗುವುದು ಅಪ್ರತಿಮ ಸಾಧಕರಿಗೆ ಮಾತ್ರವಲ್ಲವೇ ?  ಕೊಲೆಕಾಡಿಯವರು ಅಂಥಹ ಅಸಮಾನ ಪ್ರತಿಭಾವಿಲಾಸದ , ವಿದ್ವದ್ವೈಭವದ ಸರಸ್ವತೀ ಪುತ್ರರಾಗಿದ್ದರು . ಸುಪ್ರಸಿದ್ಧ ಭಾಗವತರಾದ  ಪಟ್ಲ ಸತೀಶ್ ಶೆಟ್ಟಿ , ಅಂಡಾಲ ದೇವಿಪ್ರಸಾದ್ ಶೆಟ್ಟಿ , ಶೇಖರ್ ಶೆಟ್ಟಿಗಾರ್ , ದಿನೇಶ್ ಭಟ್ ಯಲ್ಲಾಪುರ , ದೇವರಾಜ ಆಚಾರ್ಯ ,   ಭವ್ಯಶ್ರೀ ಕುಲ್ಕುಂದ , ಕೃಷ್ಣಪ್ರಕಾಶ್ ಉಳಿತ್ತಾಯ , ಪ್ರಸಾದ್ ಮೊಗೆಬೆಟ್ಟು , ಗಣೇಶ್ ಶೆಟ್ಟಿ ಕನ್ನಡಿಕಟ್ಟೆ , ಅಮ್ಮುಂಜೆ ಮೋಹನ , ದಯಾನಂದ ಕೋಡಿಕಲ್ , ಹರಿರಾಜ ಶೆಟ್ಟಿಗಾರ್ , ಪ್ರಥ್ವಿರಾಜ್ ಕವತ್ತಾರ್ , ಲಕ್ಷ್ಮಣ ಕುಮಾರ್ ಮರಕಡ ,   ಶಂಭುಕುಮಾರ್ , ಗಣೇಶ ಚಂದ್ರಮಂಡಲ , ರವಿ ಮುಂಡಾಜೆ ,  ಫ್ರೊ . ಸದಾಶಿವ ಶೆಟ್ಟಿಗಾರ್ , ಪ್ರಸಾದ್ ಚೇರ್ಕಾಡಿ , ಪ್ರಜ್ವಲ್ ಪೆಜತ್ತಾಯ ,  ದಿವೀತ್ ಕೋಟ್ಯಾನ್ , ಆದಿತ್ಯ ಅಂಬಲಪಾಡಿ , ಪವನ್  ಕೆರ್ವಾಶೆ ,  ಶ್ರೀಮತಿ ಶ್ರೀರಕ್ಷಾ ಕಾಮತ್ , ಅಶ್ವಿನೀ ಕೊಂಡದಕುಳಿ ,  ಶಶಿರಾಜ್ ಕಾವೂರು , ಜಯಕೀರ್ತಿ , ರಾಹುಲ್ ಕುಡ್ಲ , ಶರತ್ ದುಬೈ , ಚೇತನ್ ಆಚಾರ್ಯ , ಧನಂಜಯ ಕೊಯ್ಲಾ , ಗುರುರಾಜ್ ಭಟ್ ,  ಮುಂತಾದವರು ಕೊಲೆಕಾಡಿಯವರ ಶಿಷ್ಯ ಬಳಗದವರು .  ಪ್ರಸಿದ್ಧ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರು , ಕಟೀಲು ಸೀತಾರಾಮ್ ಕುಮಾರ್ ರವರು ಹಾಗೂ ಡಾ.ವಾದಿರಾಜ ಕಲ್ಲೂರಾಯರು  ಆಗಾಗ  ಕೊಲೆಕಾಡಿಯವರ ಮಾರ್ಗದರ್ಶನ ಪಡೆದು , ಅವರನ್ನು ಗುರು ಸಮಾನವಾಗಿಯೇ ಕಂಡವರು .

ಕೊಲೆಕಾಡಿಯವರ ಅದ್ಭುತ ಪ್ರತಿಭೆ ಗುರುತಿಸಿ 500 ಕ್ಕೂ ಮಿಕ್ಕಿ ಸಂಮಾನಗಳು ಸಿಕ್ಕಿವೆ . ಪಾರ್ತಿಸುಬ್ಬ ಪ್ರಶಸ್ತಿ ,  ಸ್ಕಂದ ಪುರಸ್ಕಾರ -2011 , ಪರ್ಕಳದ  ಮಂಗಳ ಸಾಹಿತ್ಯರತ್ನ ಪ್ರಶಸ್ತಿ - 2012 , ಮದ್ದಣ ಪ್ರಶಸ್ತಿ -2013 , ದಿವಾಣ ಭೀಮಭಟ್ ರ ದಿವಾಣ ಪ್ರಶಸ್ತಿ - 2014 , ದ‌.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ,  ಬೆಂಗಳೂರು ಧೀಂಗಿಣ ಪ್ರಶಸ್ತಿ 2014 , ಪಟ್ಲ ಪ್ರಶಸ್ತಿ -  2017 ,  ಶೇಣಿ ಪ್ರಶಸ್ತಿ 2018 , ವಿಟ್ಲ ಜೋಷಿ ಪ್ರಶಸ್ತಿ , ಮುಂಬೈನ ಬಾಬು ಪೂಜಾರಿ ಪ್ರಶಸ್ತಿ , ಮುಂಬೈನ ಅಜೆಕಾರು ಯಕ್ಷರಕ್ಷಾ ಪ್ರಶಸ್ತಿ ,  ಉಡುಪಿಯ ಯಕ್ಷಗಾನ ಕಲಾರಂಗದ  ಕನಕಾ ಅಣ್ಣಯ್ಯ ಪ್ರಶಸ್ತಿ , ಯಕ್ಷಸಂಗಮ ಮೂಡಬಿದಿರೆ ಪ್ರಶಸ್ತಿ - 2014   ಪ್ರಶಸ್ತಿ , ನೆಡ್ಲೆ ನರಸಿಂಹ ಭಟ್ ಪ್ರಶಸ್ತಿ , ಪದ್ಮರಾಜ್ ಎಕ್ಕಾರ್ ನೇತೃತ್ವದ ಯಕ್ಷಕಲಾ ಮೇಲೆಕ್ಕಾರು ಪ್ರಶಸ್ತಿ ,  ಮಂಗಳೂರಿನ "ಭ್ರಾಮರೀ ಯಕ್ಷಮಣಿ ಪ್ರಶಸ್ತಿ " ಸಹಿತ ಹಲವಾರು ಪ್ರಶಸ್ತಿ - ಸಂಮಾನಗಳಿಗೆ  ಭಾಜನರಾಗಿದ್ದಾರೆ . ಯಕ್ಷಗಾನದ ಪ್ರತಿಷ್ಠಿತ  *ಪಾರ್ತಿ ಸುಬ್ಬ ಪ್ರಶಸ್ತಿ* ಯನ್ನು , ಅಂದಿನ ಕರ್ನಾಟಕ ಸರ್ಕಾರದ ಸಚಿವರಾದ ಸುನೀಲ್ ಕುಮಾರ್ ರವರು ಕೊಲೆಕಾಡಿಯವರ ಸ್ವಗೃಹದಲ್ಲೇ ನೀಡಿದ್ದರಲ್ಲದೇ , ಕೊಲೆಕಾಡಿಯವರ ಪ್ರತಿಭೆ ಲಕ್ಷಿಸಿ ವೈಯಕ್ತಿಕವಾಗಿಯೂ ಸಹಾಯ ನೀಡಿದ್ದರು .ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಲೆಕಾಡಿಯವರಿಗೆ ನೀಡಬೇಕೆಂದು ನಾನು ಹಿಂದೊಮ್ಮೆ ಪ್ರಯತ್ನ ಮಾಡಿದ್ದೆ . ಆದರೂ , ಈ ಪ್ರಶಸ್ತಿ ಪಡೆಯಲು  60 ವರ್ಷ ದಾಟಬೇಕು ಎಂಬ ಸರಕಾರೀ ನಿಯಮವಿರುವ ಕಾರಣ , ಕೊಲೆಕಾಡಿಯವರು ಈ ಪ್ರಶಸ್ತಿಯಿಂದ ವಂಚಿತರಾಗಬೇಕಾಯಿತು . ಕೊಲೆಕಾಡಿಯವರಿಗೆ "  ಡಾಕ್ಟರೇಟ್ " ಪಡೆಯುವ  ಎಲ್ಲಾ ಅರ್ಹತೆಗಳಿದ್ದರೂ  ದೊರಕದಿರುವುದು ಅತ್ಯಂತ ಬೇಸರದ ಸಂಗತಿ . ಉಡುಪಿಯ ಯಕ್ಷಗಾನ ಕಲಾರಂಗದವರು  2014 ರಲ್ಲಿ ಮೊಯ್ಲೊಟ್ಟಿನಲ್ಲಿ  ಕೊಲೆಕಾಡಿಯವರಿಗೆ ನೂತನ  ಮನೆಯನ್ನು ಕಟ್ಟಿಸಿ ಕೊಟ್ಟಿದ್ದರು . ಪಟ್ಲ ಫೌಂಡೇಶನ್ ನಿಂದ ವೈದ್ಯಕೀಯ ನೆರವೂ ದೊರಕುತ್ತಿತ್ತು.

ಯಕ್ಷಕಲಾ ಕಮಲಾರ್ಕ , ಯಕ್ಷಕಾವ್ಯ ಕಮಲಾರ್ಕ , ಯಕ್ಷಕುವಲಯಾಂಬುಧಿ ಚಂದ್ರ , ಕಲಾತಪಸ್ವೀ , ಕಲಾಪುಂಗವ* - ಇತ್ಯಾದಿ ಬಿರುದುಗಳನ್ನು ಅರ್ಹವಾಗಿಯೇ  ಪಡೆದಿದ್ದರು . ತುಂಬಾ ಸ್ವಾಭಿಮಾನಿಗಳಾದ ಕೊಲೆಕಾಡಿಯವರು ,ತಮಗೆ ಎಷ್ಟೇ ಕಷ್ಟ ಬಂದಾಗಲೂ ಅಭಿಮಾನಿಗಳಲ್ಲಿ , ಶಿಷ್ಯರಲ್ಲಿ ಅಥವಾ ಮಿತ್ರರಲ್ಲಿ ಹೇಳಿಕೊಂಡವರಲ್ಲ , ದೇಹಿ ಎಂದವರಲ್ಲ .  ಆದರೂ , ಇತ್ತೀಚೆಗೆ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಗುರುಗಳ  ಪರಿಸ್ಥಿತಿ ಅರಿತುಕೊಂಡು , ಅವರ ಶಿಷ್ಯಂದಿರು , ಕಳೆದ ಕೆಲವು ವರ್ಷಗಳಿಂದ ದಾನಿಗಳಿಂದ , ಅಭಿಮಾನಿಗಳಿಂದ ಹಾಗೂ ತಾವೇ ಸ್ವಯಂಪ್ರೇರಿತರಾಗಿ  *ಕೊಲೆಕಾಡಿ ಸಹಾಯ ಹಸ್ತ*  ಎಂಬ ವಾಟ್ಸಾಪ್ ಗ್ರೂಪ್ ರಚಿಸಿ , ಸದಸ್ಯರು ಪ್ರತೀತಿಂಗಳೂ ಸಹಾಯ ಹಸ್ತ ನೀಡುವ ಮೂಲಕ  ಗುರುಗಳನ್ನು ಬದುಕಿಸಲು ತುಂಬಾ ಪ್ರಯತ್ನ ಪಟ್ಟಿದ್ದರು . ನಾನೂ ಹಲವಾರು ಸಲ  ಜಾಲತಾಣಗಳಲ್ಲಿ  ಕೊಲೆಕಾಡಿಯವರಿಗೆ ಸಹಾಯ ಹಸ್ತ ನೀಡಬೇಕೆಂಬ ವೈಯಕ್ತಿಕ  ಮನವಿಯನ್ನು ಮಾಡಿದ್ದಾಗ ತುಂಬಾ ಮಂದಿ ಯಕ್ಷಗಾನ ಅಭಿಮಾನಿಗಳು ಸ್ಪಂದಿಸಿ , ಸಹಾಯ ಮಾಡಿದ್ದರು .  ನಾವು ಕೊಲೆಕಾಡಿಯವರ ಕಾಲದಲ್ಲಿ ಇದ್ದೆವು ಅಥವಾ ಕೊಲೆಕಾಡಿಯವರು ನಮ್ಮ ಕಾಲದಲ್ಲಿ ಇದ್ದರು ಎಂಬುದು ನಮಗೆ ಹೆಮ್ಮೆಯ ವಿಷಯ .  

2014 ರಲ್ಲಿ  ಯಕ್ಷಸಂಗಮ ಮೂಡುಬಿದಿರೆಯ  15 ನೆಯ  ವಾರ್ಷಿಕೋತ್ಸವದಂದು ಕೊಲೆಕಾಡಿಯವರಿಗೆ ಹಾಗೂ ಶಂಭು ಶರ್ಮರಿಗೆ ಜಂಟಿಯಾಗಿ  ಸಂಮಾನ ಮಾಡಿದ್ದೆ . ಈ ಇಬ್ಬರೂ ಶ್ರೇಷ್ಠ ಕಲಾವಿದರು ಆರು ದಿನಗಳ ಅಂತರದಲ್ಲೇ ನಿಧನರಾದುದು ವಿಷಾದನೀಯ .

ಕೊಲೆಕಾಡಿಯವರು ತಮ್ಮ  ತಾಯಿ ಪದ್ಮಾ  ಪೂಜಾರ್ತಿ ಅನಾರೋಗ್ಯ ಪೀಡಿತರಾಗಿದ್ದು , ತಮ್ಮ ಏಕೈಕ ಪುತ್ರನನ್ನು ಅಗಲಿದ ವೇದನೆಯಲ್ಲಿದ್ದು ಮುಂದಿನ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಂಬಂಧಿಕರು ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ . ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಅವರ ತಾಯಿ , ಕುಟುಂಬಸ್ಥರು , ಶಿಷ್ಯಂದಿರು  ಹಾಗೂ ಅಭಿಮಾನಿಗಳಿಗೆ ಅವರ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು  ಭಗವಂತನಲ್ಲಿ ಯಕ್ಷಸಂಗಮ ಮೂಡುಬಿದಿರೆ ಹಾಗೂ ಸಮಸ್ತ ಅಭಿಮಾನಿಗಳ ಪರವಾಗಿ ಪ್ರಾರ್ಥಿಸುತ್ತೇನೆ .

( ಲೇಖಕರು ಯಕ್ಷಗಾನ ವಿಮರ್ಶಕರು, ಸಂಘಟಕರು)