ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವವನ್ನು ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಮೆಹಬೂಬ್ ಬಾಷಾ ವಹಿಸಿ ಮಾತನಾಡಿ, “ಈ ಪವಿತ್ರ ದಿನವು ನಮ್ಮ ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಏಕತೆಯ ಮಹತ್ವವನ್ನು ನೆನಪಿಸುವ ದಿನವಾಗಿದೆ. ಭಾರತವು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗಲಿ. ಪ್ರತಿಯೊಬ್ಬ ನಾಗರಿಕನ ಜೀವನದಲ್ಲೂ ಹೊಸ ಕನಸುಗಳು, ಹೊಸ ಆಶಯಗಳು ಹಾಗೂ ಹೊಸ ಅವಕಾಶಗಳು ಮೂಡಿಬರಲಿ” ಎಂದು ಆಶಿಸಿದರು.
ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ಸುಭಾಶ್ ಝಾ ಮಾತನಾಡಿ, “ನಮ್ಮ ಸಂವಿಧಾನದ ಮುನ್ನುಡಿಯಲ್ಲಿರುವ ಸಮಾಜವಾದಿ, ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಮತ್ತು ಗಣರಾಜ್ಯ ಎಂಬ ಮೌಲ್ಯಗಳು ದೇಶವನ್ನು ಮುನ್ನಡೆಸುವ ಪ್ರಮುಖ ಶಕ್ತಿಗಳಾಗಿವೆ. ಭಾರತವನ್ನು ಭೂಮಿಯ ಮೇಲಿನ ಅತ್ಯುತ್ತಮ ರಾಷ್ಟ್ರವನ್ನಾಗಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡುವ ಸಂಕಲ್ಪ ಹೊಂದಬೇಕು” ಎಂದರು.
ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ಮಾತನಾಡಿ, “ನಾವು ಇಂದು ಕೇವಲ ಗಣರಾಜ್ಯೋತ್ಸವವನ್ನಷ್ಟೇ ಅಲ್ಲ, ನಮ್ಮ ಸಂವಿಧಾನದ ಆತ್ಮವನ್ನೂ ಆಚರಿಸುತ್ತಿದ್ದೇವೆ. ಸಮಾಜದ ಹಿತಕ್ಕಾಗಿ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು” ಎಂಬ ಸಂದೇಶ ನೀಡಿದರು.
ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ಚಂದ್ರಶೇಖರ ರಾಜೇ ಅರಸ್, ಯೋಗೇಶ್ ಬೆಡೇಕರ್, ಡಾ. ಶರತ್ ಗೋರೆ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ನಡೆಸಲಾಯಿತು.
ವಿದ್ಯಾರ್ಥಿನಿ ಸಮರ್ಥಿನಿ ಸ್ವಾಗತಿಸಿದರು, ರಿಯಾ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ರಾಧಿಕಾ ನಿರೂಪಿಸಿದರು.



