ಮೂಡುಬಿದಿರೆ: ಸೇವಾಂಜಲಿ ಎಜುಕೇಷನಲ್ ಟ್ರಸ್ಟ್, ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ ಮಂಗಳೂರು ಮತ್ತು ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಪ್ರೇರಣಾ ಶಾಲೆಯಲ್ಲಿ ಉಚಿತ ನೇತ್ರ ಚಿಕಿತ್ಸೆ, ರಕ್ತದೊತ್ತಡ, ರಕ್ತ ಪರೀಕ್ಷೆ ಹಾಗೂ ಚರ್ಮರೋಗ ತಪಾಸಣಾ ಶಿಬಿರವು ಭಾನುವಾರ ಜರುಗಿತು.
ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ, "ಲಕ್ಷಾಂತರ ಜನರು ನೇತ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಾರಾದೀಪ್ ಫಾಸ್ಪೇಟ್ನಂತಹ ಕಂಪನಿಗಳು ತಮ್ಮ ಸಿ.ಎಸ್.ಆರ್ ನಿಧಿಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಿರುವುದು ಶ್ಲಾಘನೀಯ. ಇಂತಹ ಶಿಬಿರಗಳು ಬಡ ಮತ್ತು ಸಾಮಾನ್ಯ ಜನರಿಗೆ ವರದಾನವಾಗಿವೆ," ಎಂದು ಹಾರೈಸಿದರು.
ಸಾಧನೆಯ ಹಾದಿ:
ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ನ ಜಾಯಿಂಟ್ ಜನರಲ್ ಮ್ಯಾನೇಜರ್ ಡಾ. ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, "ಹಿಂದಿನ ಎಂ.ಸಿ.ಎಫ್ ಕಂಪನಿಯು ಈಗ ಪಾರಾದೀಪ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ನಾವು 55 ಶಿಬಿರಗಳನ್ನು ನಡೆಸಿ 20 ಸಾವಿರ ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಸುಮಾರು 2 ಸಾವಿರ ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ," ಎಂದರು.
ಮುಖ್ಯ ಅತಿಥಿಯಾಗಿದ್ದ ಮಾರೂರು ರವೀಂದ್ರ ಪೈ ಅವರು ಶಾಲೆಯ ಅಭಿವೃದ್ಧಿ ಹಾಗೂ ಟ್ರಸ್ಟ್ನ ಸೇವೆಯನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಾರಾದೀಪ್ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಎಸ್. ಗಿರೀಶ್ ಮಾತನಾಡಿ, "ಭಾರತದ ರಸಗೊಬ್ಬರ ಉತ್ಪಾದನೆಯಲ್ಲಿ ಶೇ. 10ರಷ್ಟು ಪಾಲು ಹೊಂದಿರುವ ನಮ್ಮ ಸಂಸ್ಥೆಗೆ ಸಮಾಜಸವೆ ಮಾಡುವುದು ಹೆಮ್ಮೆಯ ವಿಷಯ," ಎಂದು ತಿಳಿಸಿದರು.
ದಾಖಲೆ ಸಂಖ್ಯೆಯ ಫಲಾನುಭವಿಗಳು:
ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನುರಿತ ಹಾಗೂ ಸುಪ್ರಸಿದ್ಧ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ದಾಖಲೆ ಎನಿಸಬಹುದಾದ 383 ಮಂದಿಯು ಶಿಬಿರದ ಪ್ರಯೋಜನ ಪಡೆದರು.
ಸೇವಾಂಜಲಿ ಟ್ರಸ್ಟ್ನ ಅಧ್ಯಕ್ಷ ರಾಜೇಶ್ ಬಂಗೇರ, ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ, ಮುಖ್ಯ ಮಾತಾಜಿ ವತ್ಸಲಾ ರಾಜೇಶ್, ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಅಶೋಕ ಪ್ರಭು , ಸೇವಾಂಜಲಿ ಎಜುಕೇಷನ್ ಟ್ರಸ್ಟ್ ನ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್ , ಕಾರ್ಯದರ್ಶಿ ಡಾ. ಕೇಶವ ಹೆಗ್ಡೆ , ಕೋಶಾಧಿಕಾರಿ ಎಸ್.ಎನ್ . ಬೋರ್ಕರ್ , ಟ್ರಸ್ಟಿಗಳಾದ ಮಂಜುನಾಥ ಶೆಟ್ಟಿ , ಆನಂದ ಕಾರ್ಲರು ಉಪಸ್ಥಿತರಿದ್ದರು
ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

