ಮೂಡುಬಿದಿರೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರಕಾರದ ವಿದ್ಯುತ್ ಲೈನ್ (400 ಕೆ. ವಿ ಯುಕೆಟಿಎಲ್) ಕಾಮಗಾರಿಯ ಗುತ್ತಿಗೆ ಪಡೆದಿರುವ ಸ್ಟೆರ್ ಲೈಟ್ ವಿದ್ಯುತ್ ಕಂಪನಿಯು ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಹಾಗೂ ಮೂಡುಬಿದಿರೆ ಶಾಸಕರು ತಾಲೂಕು ಕೆಡಿಪಿ ಹಾಗೂ ಅಕ್ರಮ-ಸಕ್ರಮ ಸಭೆಯನ್ನು ನಡೆಸದೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸ್ಟೆರ್ ಲೈಟ್ ಕಂಪನಿಯು ರೈತರಿಗೆ ಅನ್ಯಾಯ ಎಸಗುತ್ತಿದ್ದು, ರೈತರಿಗೆ ತೊಂದರೆಯಾದರೆ ಕಾಂಗ್ರೆಸ್ ಪಕ್ಷವು ಅದನ್ನು ಸಹಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.ಕೇಂದ್ರ ಸರ್ಕಾರದ ಬಲ ಇದೆ ಎಂದು ತೋರಿಸಲು ಮುಂದಾದರೆ, ಕಾಂಗ್ರೆಸ್ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾಗುತ್ತದೆ. ಅಗತ್ಯ ಬಿದ್ದರೆ ಸ್ಟೆರ್ ಲೈಟ್ ಕಂಪನಿಯನ್ನು ಆಂಧ್ರಪ್ರದೇಶಕ್ಕೆ ವಾಪಸ್ ಕಳುಹಿಸಲು ಕೂಡ ಹಿಂಜರಿಯುವುದಿಲ್ಲ. ಬಿಜೆಪಿ ಪದಾಧಿಕಾರಿಯಾಗಿರುವ ಒಬ್ಬ ಮುಖಂಡರು ಹಸಿರು ಶಾಲು ಹಾಕಿಕೊಂಡು ರೈತ ಮುಖಂಡನಂತೆ ನಟಿಸಿ ಅಮಾಯಕ ರೈತರೊಂದಿಗೆ ನಾಟಕವಾಡುತ್ತಿದ್ದಾರೆ. ಹಸಿರು ಶಾಲು ಹಾಕಿದ ಮಾತ್ರಕ್ಕೆ ಯಾರೂ ರೈತ ಮುಖಂಡರಾಗುವುದಿಲ್ಲ. ರೈತರು ಇಂತಹವರ ನಾಟಕವನ್ನು ಅರ್ಥಮಾಡಿಕೊಳ್ಳಬೇಕು ಎಂದು ರೈತರನ್ನು ಆಗ್ರಹಿಸಿದರು.
ಸಮಿತಿ ಸಭೆ ನಡೆಸದಿದ್ದರೆ ಶಾಸಕರ ಕಚೇರಿಗೆ ಮುತ್ತಿಗೆ
ಇದೇ ವೇಳೆ, ಅಕ್ರಮ-ಸಕ್ರಮ ಸಮಿತಿ, ಕೆಡಿಪಿ, ಆಶ್ರಯ ಮುಂತಾದ ಸಮಿತಿಗಳು ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ, ಅದರ ಅಧ್ಯಕ್ಷರಾಗಿರುವ ಶಾಸಕರು ಒಮ್ಮೆಯೂ ಸಭೆ ನಡೆಸಿಲ್ಲ ಎಂದು ಮಿಥುನ್ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದು ಬಡವರು ಮತ್ತು ರೈತರ ಬಗ್ಗೆ ಶಾಸಕರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ದೂರಿದರು.
ಶಾಸಕರಿಗೆ ಹತ್ತು ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಿತಿಗಳ ಸಭೆಗಳನ್ನು ನಡೆಸದಿದ್ದರೆ, ಅವರ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಮಿಥುನ್ ರೈ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿಸೋಜ ಸೇರಿದಂತೆ ಮಿತ್ತಬೈಲು ವಾಸುದೇವ ನಾಯಕ್, ರಮೇಶ್ ಶೆಟ್ಟಿ ಪಡುಮಾರ್ನಾಡು, ಚಂದ್ರಹಾಸ ಸನಿಲ್, ಟಿ.ಎನ್. ಕೆಂಬಾರೆ, ಶೌಕತ್ ಬೆಳುವಾಯಿ, ಅಬ್ದುಲ್ ಲತೀಫ್, ಜೊಸ್ಸಿ ಮಿನೇಜಸ್, ಶಶಿಧರ ಎಂ., ಹರೀಶ್ ಆಚಾರ್ಯ, ರುಕ್ಕಯ್ಯ ಪೂಜಾರಿ, ಇಕ್ಬಾಲ್ ಕರೀಮ್, ಅಲ್ತಾಫ್, ರತ್ನಾಕರ ಮೊಯ್ಲಿ, ಝಕರಿಯಾ ಯೂಸುಫ್, ರೀಟಾ ಕುಟಿನ್ಹೊ, ರೂಪಾ ಸಂತೋಷ್ ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ವಸೀರ್ ಪುತ್ತಿಗೆ, ಸಲಾಮ್ ಹೊಸಂಗಡಿ, ಜಾವೆದ್ ಹೊಸಂಗಡಿ, ಮರ್ವಿನ್ ಲೋಬೋ, ಮುರಳೀಧರ ಕೋಟ್ಯಾನ್, ಅಬೂಬಕ್ಕರ್ ಶಿರ್ತಾಡಿ, ಆಳ್ವಿನ್ ಮಿನೇಜಸ್, ಆಳ್ವಿನ್ ಡಿಸೋಜ, ಸತೀಶ್ ಕೊಡಂಗಲ್, ಸಂದೀಪ್ ಅಲಂಗಾರ್, ಪ್ರವೀಣ್ ಶೆಟ್ಟಿ ಪುತ್ತಿಗೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

